Monday, March 31, 2014

ಈಗ....

ಸ್ವಾತಂತ್ರ್ಯದ ಹಕ್ಕಿಯು ತನ್ನ ರೆಕ್ಕೆಗಳ ಬೀರಿ ಹಾರುತ್ತಿದೆ ಎಂದರು,
ಈಗ,
ಅದೇ ಹಕ್ಕಿಯ ರೆಕ್ಕೆ ಇಲ್ಲದಾಗಿಸಿ, ಭಯದ ನೆರಳನ್ನು ಹರಡುತ್ತಿರುವರು.
 

ಹಲವರಿದ್ದರೂ ಭಾರತವು ಒಂದೆಂದು ಪಠ್ಯದಲ್ಲೆಲ್ಲಾ ಬರೆದಿಟ್ಟರು,
ಈಗ,
ಅವರುಗಳು ಅನ್ಯರು, ನಮ್ಮದು ನಮಗೆ ಎಂದು ಭಂಗಿಸುತ್ತಿರುವರು.
 

ಕಲೆ ಮತ್ತು ಸಂಸ್ಕೃತಿಯು ಜಗತ್ತಿನ ಸಂಪತ್ತೆಂದರು,
ಈಗ,
ಕಲಾವಿದರನ್ನು ಓಡಿಸಿ, ಸಂಸ್ಕೃತಿಯನ್ನು ಧ್ವಂಸಗೊಳಿಸುತ್ತಿರುವರು.
 

ರೈತರು ನಾಡಿನ ಬೆನ್ನೆಲುಬೆಂದು ಪತ್ರಿಕೆಗಳಲ್ಲಿ ಗೀಚಾಡಿದರು,
ಈಗ,
ಆತ ಅಲ್ಲಿ ನರಳುತ್ತಿರಲು, ಪುಟಗಳೆಲ್ಲ ಜಾಹಿರಾತು ತುಂಬಿಸಿಡುವರು.
 

ಪಾಶ್ಚಾತ್ಯ ವಿಷವೆಂದು ಹುಚ್ಚರಾಗಿ ಕೂಗಾಡಿದರು,
ಈಗ,
ಅವರ ಮಾರುಕಟ್ಟೆಯನ್ನು ಮಾತ್ರ ಆಚರಿಸಿ,ಪ್ರಗತಿಪರ ಸಂಗತಿಗಳನ್ನು ವಿಷವೆನ್ನುತ್ತಿರುವರು.
 

ನಮ್ಮ ಇತಿಹಾಸವನ್ನು ನೆನೆಪಿಸಿ ಹೆಮ್ಮೆಪಡು ಎಂದರು,
ಈಗ,
ಅದೇ ಇತಿಹಾಸವನ್ನು ಕವಲೊಡೆದು, ದೇಶವನ್ನು ಚೂರಾಗಿಸಿರುವರು.
 

'ವಸುಧೈವ ಕುಟುಂಬಕಂ', ಎನ್ನುತ ಸಭೆಗಳನ್ನು ಆರಂಭಿಸಿದರು, 
ಈಗ,
ಆ ವಾಸುದೇವನ ನಂಬುವವ ಮಾತ್ರ ನಮ್ಮ ಕುಟುಂಬದವರೆಂದು ಬೆದರಿಸುತ್ತಿರುವರು.
 

ನಾವೆಲ್ಲ ಒಂದೇ ತಾಯಿಯ ಮಕ್ಕಳು, ಮಕ್ಕಳು ಎಂದು ಜಪಿಸಿದರು,
ಈಗ,
ಅವಳ ಮಕ್ಕಳನ್ನೂ ಹಿಂಸಿಸಿ,ಆ ತಾಯಿಯನ್ನೂ ನೋಯಿಸುತ್ತಿರುವರು.

Wednesday, November 21, 2012

ಕಂಪಾದ ಕೆಂಪು ಕನ್ನಡ

ಕನ್ನಡದಲ್ಲಿ ಬರೆದು ನನ್ನ ಮನಸಿನ ಅನಿಸಿಕೆಗಳನ್ನು ಹೊರಹಾಕುವ ಹಂಬಲ ಇತ್ತೀಚಿಗೆ ಹೆಚ್ಚಾಗಿದೆ. ನನ್ನ ಹೊಸ ಬ್ಲಾಗಿನಲ್ಲಿರುವ ತಾಂತ್ರಿಕ ದೋಷದ ಕಾರಣ ಕನ್ನಡ ಲಿಪಿಯು ಅಲ್ಲಿ ಬಾರದಾಗಿದೆ. ಕಳೆದ ಹಲವು ತಿಂಗಳುಗಳಲ್ಲಿ ನಾನು ಕನ್ನಡದಲ್ಲಿ ಯಾವ ಲೇಖನಗಳನ್ನೂ ಬರೆದಿಲ್ಲ - ಈಗ ಮತ್ತೆ ಗೂಗಲ್ ಸೇವೆಯ ಮೂಲಕ ನನ್ನ ಲೇಖನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೆನೆ.

'ನಾದಮಯ' ಎಂಬ ಅಂತರ್ಜಾಲ ವಿಳಾಸವನ್ನು ಈ ನನ್ನ ಹೊಸ ಲೇಖನ ಪುಟಕ್ಕೆ ಇಟ್ಟಿರುವುದು ಯಾವ ದೊಡ್ದ ಕಾರಣಕ್ಕಾಗೂ ಅಲ್ಲ; ರಾಜ್ ಕುಮಾರ್'ರವರ ಎಲ್ಲ ಹಾಡುಗಳಲ್ಲಿ ನನಗೆ ಬಹಳ ಇಷ್ಟವಾದ ಹಾಡು ಜೀವನ ಚೈತ್ರ ಚಿತ್ರದಲ್ಲಿ ಅಣ್ಣಾವ್ರು ಹಾಡಿರುವು ಈ ಹಾಡು. ಈ ಕಾರಣವಲ್ಲದೆ, ಈಗ ನಮ್ಮ ಸಮಾಜವು ಹಲವಾರು ನಾದ - ಚರ್ಚೆ, ಗಲಭೆ, ಗೊಂದಲಗಳ ನಾದಗಳಲ್ಲಿ ಮುಳುಗಿ ಅಪ-ನಾದಮಯವಾಗಿದೆ. ನನ್ನ
ಲೇಖನಗಳಲ್ಲಿ, ನಮ್ಮ ಸುತ್ತಿನ ವಿವಾದ-ವಿಚಾರಗಳನ್ನು ಇಲ್ಲಿ ಬರೆದು ನಿಮ್ಮ ಮೆದುಳನ್ನು ನನ್ನ ಪದಗಳ ನಾದದಿಂದ, ಕೆಲವು ಕ್ಷಣಗಳಿಗಾದರೂ ನಾದಮಯಗೊಳಿಸುವೆನೋ ಏನೋ ಎಂಬ ಒಂದು ಸಣ್ಣದಾದ ಆಸೆಯೂ ಹೌದು.


ಈ ನನ್ನ ಅಂತರ್ಜಾಲ ಪುಟದ ಶೀರ್ಷಿಕೆ "ಕಂಪಾದ ಕೆಂಪು ಕನ್ನಡ" ಎಂದು ಕರೆದಿದ್ದೇನೆ. ಇದು ಏಕೆ ಎಂಬುದು ಮುಂದಿನ ನನ್ನ ಲೇಖನಗಳನ್ನು ನೀವು ಓದಿ ತಿಳಿದುಕೊಳ್ಳಬಹುದು :)


ರಾಜ್ಯೊತ್ಸವದ ತಿಂಗಳಲ್ಲಿ ನಾನು ಕನ್ನಡದಲ್ಲಿ ಮತ್ತೆ, ಹೆಚ್ಚಾಗಿ ಬರೆಯುವೆನೆಂದು ಪಣ ತೊಟ್ಟಿದ್ದೇನೆ - ಎಷ್ಟುವರೆಗು ಇದನ್ನು ಕಾಪಾಡುವೆನು ಎಂದು ಕಾದು ನೋಡೋಣ. ಅಲ್ಲಿವರೆಗೆ, ನನ್ನ ಸರಳ
ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆಗಕನ್ನು ನನಗೆ ತಿಳಿಸಿರಿ.


ಇಂತಿ ನಿಮ್ಮವ

ಕಂಪಾದ ಕೆಂಪು ಕನ್ನಡದ
--
ರಾಘವೇಂದ್ರ