Monday, March 31, 2014

ಈಗ....

ಸ್ವಾತಂತ್ರ್ಯದ ಹಕ್ಕಿಯು ತನ್ನ ರೆಕ್ಕೆಗಳ ಬೀರಿ ಹಾರುತ್ತಿದೆ ಎಂದರು,
ಈಗ,
ಅದೇ ಹಕ್ಕಿಯ ರೆಕ್ಕೆ ಇಲ್ಲದಾಗಿಸಿ, ಭಯದ ನೆರಳನ್ನು ಹರಡುತ್ತಿರುವರು.
 

ಹಲವರಿದ್ದರೂ ಭಾರತವು ಒಂದೆಂದು ಪಠ್ಯದಲ್ಲೆಲ್ಲಾ ಬರೆದಿಟ್ಟರು,
ಈಗ,
ಅವರುಗಳು ಅನ್ಯರು, ನಮ್ಮದು ನಮಗೆ ಎಂದು ಭಂಗಿಸುತ್ತಿರುವರು.
 

ಕಲೆ ಮತ್ತು ಸಂಸ್ಕೃತಿಯು ಜಗತ್ತಿನ ಸಂಪತ್ತೆಂದರು,
ಈಗ,
ಕಲಾವಿದರನ್ನು ಓಡಿಸಿ, ಸಂಸ್ಕೃತಿಯನ್ನು ಧ್ವಂಸಗೊಳಿಸುತ್ತಿರುವರು.
 

ರೈತರು ನಾಡಿನ ಬೆನ್ನೆಲುಬೆಂದು ಪತ್ರಿಕೆಗಳಲ್ಲಿ ಗೀಚಾಡಿದರು,
ಈಗ,
ಆತ ಅಲ್ಲಿ ನರಳುತ್ತಿರಲು, ಪುಟಗಳೆಲ್ಲ ಜಾಹಿರಾತು ತುಂಬಿಸಿಡುವರು.
 

ಪಾಶ್ಚಾತ್ಯ ವಿಷವೆಂದು ಹುಚ್ಚರಾಗಿ ಕೂಗಾಡಿದರು,
ಈಗ,
ಅವರ ಮಾರುಕಟ್ಟೆಯನ್ನು ಮಾತ್ರ ಆಚರಿಸಿ,ಪ್ರಗತಿಪರ ಸಂಗತಿಗಳನ್ನು ವಿಷವೆನ್ನುತ್ತಿರುವರು.
 

ನಮ್ಮ ಇತಿಹಾಸವನ್ನು ನೆನೆಪಿಸಿ ಹೆಮ್ಮೆಪಡು ಎಂದರು,
ಈಗ,
ಅದೇ ಇತಿಹಾಸವನ್ನು ಕವಲೊಡೆದು, ದೇಶವನ್ನು ಚೂರಾಗಿಸಿರುವರು.
 

'ವಸುಧೈವ ಕುಟುಂಬಕಂ', ಎನ್ನುತ ಸಭೆಗಳನ್ನು ಆರಂಭಿಸಿದರು, 
ಈಗ,
ಆ ವಾಸುದೇವನ ನಂಬುವವ ಮಾತ್ರ ನಮ್ಮ ಕುಟುಂಬದವರೆಂದು ಬೆದರಿಸುತ್ತಿರುವರು.
 

ನಾವೆಲ್ಲ ಒಂದೇ ತಾಯಿಯ ಮಕ್ಕಳು, ಮಕ್ಕಳು ಎಂದು ಜಪಿಸಿದರು,
ಈಗ,
ಅವಳ ಮಕ್ಕಳನ್ನೂ ಹಿಂಸಿಸಿ,ಆ ತಾಯಿಯನ್ನೂ ನೋಯಿಸುತ್ತಿರುವರು.